Sunday 1 October 2017

ಗಾಂಧಿ ಜಯಂತಿಯಂದು ನೆನಪಾಗುವ ಸಂಗತಿಗಳಿಗೆ ಪ್ರತಿಕ್ರಿಯಿಸುವ ತುರ್ತಿನಲ್ಲಿ...



ಸೂರ್ಯನ ನೆರಳು

ನಿರ್ದೇಶನ: ವಾಸುದೇವ ಗಂಗೇರ
ರಚನೆ: ಉದಯ ಗಾಂವಕಾರ
ಸಂಗೀತ ನಿರ್ವಹಣೆ: ಸದಾನಂದ ಬೈಂದೂರು, ವಿಕ್ರಂ 
ವಸ್ತ್ರ ವಿನ್ಯಾಸ: ಚಿನ್ನಾ ವಾಸುದೇವ್
ರಂಗ ವಿನ್ಯಾಸ: ಬಾಲಕೃಷ್ಣ ಎಂ
ನಿರ್ವಹಣೆ: ಜಿ.ವಿ.ಕಾರಂತ, ಶಂಕರ ಆನಗಳ್ಳಿ
ಅನುಷಾ
ಅಜಾದ್ ಬೈಂದೂರು
ಹಿತೇಶ್
ಲಂಕೇಶ್
ನಾಗಶ್ರೀ
ಪಾರ್ಥನಾ ಗಾಂವಕಾರ
ರಶ್ಮಿ
ರಮ್ಯಾ
ಸಚಿನ್
ಸ್ಮಿತಾ
ಸಂದೇಶ
ಸಂಧ್ಯಾ ನಾಯಕ
ಶಿವಾನಂದ
ಸುಕನ್ಯಾ


ಅಕ್ಟೋಬರ್ 2, 2017: ಸಂಜೆ 4.00 ಕ್ಕೆ
ಎಚ್ ಎಮ್ ಎಮ್ ಶಾಲೆಯ ಹಳೆಯ ಕಟ್ಟಡ, ಕುಂದೇಶ್ವರ ರಸ್ತೆ, ಕುಂದಾಪುರ

  ಮನುಷ್ಯನ ಚರಿತ್ರೆಯನ್ನು ವಿಚಾರಗಳ ಸಾಹಸ ಎಂದು ಕರೆಯಲಾಗುತ್ತದೆ.  ಪ್ರಶ್ನೆ ಹುಟ್ಟಿಕೊಂಡ ಮರುಗಳಿಗೆಯಲ್ಲೇ ಮನುಷ್ಯ ಹುಟ್ಟಿಕೊಂಡ. ಉಸಿರಾಟ, ಆಹಾರ ಸೇವನೆ, ನಿದ್ದೆ, ಮೈಥುನಗಳು ಮಾತ್ರವೇ ಜೀವಂತಿಕೆಯ ಚಿಹ್ನೆಗಳಲ್ಲ್ಲ; ಪ್ರಶ್ನಿಸುವ ಚೈತನ್ಯ ಕೂಡಾ ಜೀವಂತಿಕೆಯ ಲಕ್ಷಣ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕೆಂದರೆ, ಮನುಷ್ಯನ ಮಟ್ಟಿಗಂತೂ ಜೀವಂತಿಕೆಯ ಲಕ್ಷಣ ಇದೊಂದೆ! ನಾವು ಪ್ರಶ್ನಿಸುತ್ತಿದ್ದೇವೆಂದರೆ ಯೋಚಿಸುತ್ತಿದ್ದೇವೆಂದು ಅರ್ಥ. ಸ್ವತಂತ್ರವಾಗಿ ಯೋಚಿಸುವವರು ಸ್ವತಂತ್ರ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯಗಳಿರುವುದು ಪ್ರತಿಯೊಬ್ಬರಿಗೂ ತಮ್ಮದೇ ಆಸೆ, ಆಮಶಂಕೆ, ಜ್ವರ, ನೆಗಡಿ ಕೆಮ್ಮು ಇರುವಷ್ಟು ಸ್ವಾಭಾವಿಕ. ಸಂವಾದ ಸಂಸ್ಕøತಿಯಿಂದಲೇ ಮನುಷ್ಯ ಸಮಾಜವು ಇಲ್ಲಿಯವರೆಗೂ ಬರೆಲು ಸಾಧ್ಯವಾಗಿದೆ. ದೂರದ ಗಮ್ಯಕ್ಕೂ ಇದೇ ದಾರಿ. ಬುದ್ಧ, ಬಸವ,  ಗಾಂಧಿ, ಅಂಬೇಡ್ಕರ್ ರನ್ನೂ ಒಳಗೊಂಡಂತೆ ಮಾನವ ಇತಿಹಾಸದಲ್ಲಿ ಮಿಂಚಿ ಮರೆಯಾದ ಮಹಾ ಚೇತನಗಳೆಲ್ಲ ಸಂವಾಧದ ಸಮುದ್ರ-ಮಥನದಿಂದ ಉದ್ಭವಿಸಿದವರೇ! ಇಲ್ಲಿ ಯಾರೂ ಗೆಲ್ಲುವುದಿಲ್ಲ, ಯಾರೂ ಸೋಲುವುದಿಲ್ಲ. ಒಬ್ಬರು ಇನ್ನಬ್ಬರನ್ನುಆವಿರ್ಭವಿಸಿಕೊಂಡು ಹೊಸ ಹುಟ್ಟನ್ನು ಪಡೆಯುತ್ತಾರೆ.  ಸೂರ್ಯನಿಗಿಂತ ಪಖರವಾದ ಬೆಳಕಿನ ಹಿನ್ನೆಯಲ್ಲಿ ಮಾತ್ರ ಸೂರ್ಯನ ನೆರಳು ಸಾಧ್ಯ.
ಗಾಂಧಿ ತನ್ನ ಜೀವಿತದ ಪ್ರತಿ ಘಟ್ಟದಲ್ಲೂ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಅನೇಕ ಪ್ರಶ್ನೆಗಳನ್ನು ಎದುರಿಸುತ್ತಾರೆ. ಅವರ ಸಾವೂ ಅವರು ಕೇಳಿದ ಪ್ರಶ್ನೆಯೇ!
ಸೂರ್ಯನ ನೆರಳು ನಾಟಕವು ಗಾಂಧಿಯ ಸಾವಿನ ನಂತರದ ಪ್ರಶ್ನೆಗಳನ್ನು ಎದುರಿಸುತ್ತದೆ. ಈ ನೆಲದಲ್ಲಿ ಒಡಮೂಡಿದ ವಿವೇಕದಲ್ಲಿ ನೂರಾರು, ಸಾವಿರಾರು ಸಂವಾದಗಳ ತಿಳಿವಿನ ಎಳೆಗಳು ಜೋಡಿಸಿಕೊಂಡಿವೆ. ಆಧುನಿಕ ಕಾಲದ ಗಾಂಧಿ-ಅಂಬೇಡ್ಕರ್, ಗಾಂಧಿ-ಎಮ್ ಎನ್ ರಾಯ್ ರ ನಡುವೆ ಇದ್ದಿರುವ ವ್ಯತ್ಯಾಸಗಳೇ ಉಪನಿಷತ್ತುಗಳಲ್ಲಿ ಬರುವ ಉದ್ಧಾಲಕ ಮತ್ತು ಯಾಜ್ಞವಲ್ಕ್ಯರ ನಡುವೆಯೂ ಇದ್ದವು. ಚಾರ್ವಾಕ, ಬುದ್ಧ, ಬಸವ ಮುಂತಾದವರೆಲ್ಲರೂ ಆಯಾ ಕಾಲದ ಯಥಾಸ್ಥಿತಿವಾದಿಗಳನ್ನು ಪ್ರಶ್ನೆಗಳ ಮೂಲಕ ಎದುರಿಸಿದ್ದರು. ಗಾಂಧಿಯಿಂದ ಅಂಬೇಡ್ಕರ್ ಎಷ್ಟನ್ನು ಪಡೆದುಕೊಂಡಿದ್ದರೋ ಅಷ್ಟನ್ನು ಅಂಬೇಡ್ಕರರಿಂದ ಗಾಂಧಿಯೂ ಪಡೆದುಕೊಂಡಿದ್ದರು. ವೈಚಾರಿಕ ವಿಕಾಸಕ್ಕೆ ಸಂವಾದದ ಜರೂರು ಇದೆ ಎನ್ನುವುದನ್ನು ಈ ನಾಟಕ ಮತ್ತೆ ಮತ್ತೆ ಹೇಳುತ್ತದೆ.
 ನಾಟಕದುದ್ದಕ್ಕೂ ವಿಭಿನ್ನ ಯೋಚನೆ, ಸಿದ್ಧಾಂತಗಳನ್ನು ಮುಖಾಮುಖಿಯಾಗಿಸುತ್ತಲೇ ಯಾವುದನ್ನೂ ಕಡೆಯದೆ, ಯಾವುದನ್ನೂ ಹಿರಿದೆಂದು ಎತ್ತಿಹಿಡಿಯದೆ ನಮ್ಮ ನಡುವೆ ಮಾತುಕತೆ ಅಗತ್ಯ ಎಂಬುದಷ್ಟನ್ನೇ ಈ ನಾಟಕ ಸೂಚಿಸುತ್ತದೆ. ಗಾಂಧಿಯ ಸಾವಿನಿಂದ ಆರಂಭವಾಗುವ ನಾಟಕ ಸಮಯರೇಖೆಯ ಹಿಂದಕ್ಕೂ ಮುಂದಕ್ಕೂ ಚಲಿಸುತ್ತಾ ಕಾಲಾತೀತವಾಗುತ್ತದೆ. ಆಗಾಗ ನಟರು ವರ್ತಮಾನಕ್ಕೆ, ದೈನಿಕದ ಕಡು ವಾಸ್ತವಕ್ಕೆ ಹಿಂದಿರುಗುತ್ತಾರೆ. ಈ ನೆಲದ ಇತಿಹಾಸವನ್ನು ಮತ್ತೆ ಮತ್ತೆ ಮುಟ್ಟಿನೋಡುತ್ತಾರೆ.  ಕೆಲವೊಮ್ಮೆ ಹಠಾತ್ತನೆ ನಾಟಕದಿಂದ ಹೊರಬಂದು ಪ್ರೇಕ್ಷಕರಾಗಿಬಿಡುತ್ತಾರೆ. ಗಾಂಧಿ ಜಯಂತಿಯ ಸಮಯದಲ್ಲಿ ಬೇಡವೆಂದರೂ ನೆನಪಾಗಬಹುದಾದ ಸಂಗತಿಗಳಿಗೆ ಪ್ರತಿಕ್ರಿಯಿಸುವ ತುರ್ತಿನಲ್ಲಿ ಈ ನಾಟಕ ಹುಟ್ಟಿಕೊಂಡಿದೆಯೆಂಬುದನ್ನು ಒಪ್ಪುತ್ತಲೇ ನಾಟಕವನ್ನು ನೋಡಲು ನಿಮ್ಮನ್ನು ಪ್ರೀತಿಯಿಂದ ಒತ್ತಾಯಿಸುತ್ತದೆ ಸಮುದಾಯ.

No comments:

Post a Comment